ತಾಜಾ ಸುದ್ದಿಗಳು

4 ಲಕ್ಷ ರೂ ಮೌಲ್ಯದ ಡೀಸೆಲ್​ ಕದ್ದ ಖದೀಮರು!

ಯಾದಗಿರಿ: ದೇಶಾದ್ಯಂತ ಪೆಟ್ರೋಲ್​-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಾಗಿರುವ ಹಿನ್ನೆಲೆ ಕಳ್ಳರು ಡೀಸೆಲ್​ ಕದ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ನಗರದಲ್ಲಿ ಡೀಸೆಲ್​​ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಖದೀಮರು ಹಗಲು ಹೊತ್ತು ಹೊಂಚು ಹಾಕಿ ರಾತ್ರಿ ಹೊತ್ತು ಡಿಸೇಲ್ ಕಳ್ಳತನ ಮಾಡುತ್ತಿದ್ದಾರೆ. ಯಾದಗಿರಿ ನಗರದಲ್ಲಿರುವ ಎರಡು ಪೆಟ್ರೋಲ್ ಬಂಕ್​ಗಳಲ್ಲಿ 4700 ಲೀಟರ್ ಡಿಸೇಲ್ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಯಾದಗಿರಿ ನಗರದ ಮುಂಡರಗಿ ರಸ್ತೆ ಮಾರ್ಗದ ಎಸ್ಸಾರ್ ಪೆಟ್ರೋಲ್ ಬಂಕ್​​ನಲ್ಲಿ ನಿನ್ನೆ ತಡರಾತ್ರಿ 2700 ಲೀಟರ್ ಡೀಸೆಲ್​ ಕಳ್ಳತನವಾಗಿದ್ದು, ಜೂನ್ 20 ರಂದು ಗುರು ಪೆಟ್ರೋಲ್ ಬಂಕ್ ನಲ್ಲಿ 2000 ಲೀಟರ್ ಡೀಸೆಲ್​ ಕಳ್ಳತನ ಮಾಡಿದ್ದಾರೆ.

ಅಂಡರ್ ಗ್ರೌಂಡ್ ನಲ್ಲಿರುವ ಡಿಸೇಲ್ ಟ್ಯಾಂಕ್ ಕವರ್ ಓಪನ್ ಮಾಡಿ ಒಟ್ಟು 4 ಲಕ್ಷ ರೂ ಮೌಲ್ಯದ ಡೀಸೆಲ್​ನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾವನ್ನು ಬಟ್ಟೆಯಿಂದ ಕವರ್ ಮಾಡಿ ಬಳಿಕ ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಸಿಗದೇ ಹಾಗೆ ಕಳ್ಳತನ ಎಸಗಿದ್ದಾರೆ. ಸ್ಥಳಕ್ಕೆ ಎಸ್ಪಿ ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್​ಗೆ 102 ರೂ. ಆಗಿದೆ. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker